ಇತ್ತೀಚೆಗೆ ಬಾಲಿವುಡ್ ನಿರ್ದೇಶಕ ಕಮ್ ನಟ ಅನುರಾಗ್ ಕಶ್ಯಪ್, ಹಿಂದಿ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಬಾಲಿವುಡ್ ಬಿಟ್ಟು ಸೌತ್ ಗೆ ಬಂದು ಸೆಟಲ್ ಆಗೋದಾಗಿ ಕೂಡ ಓಪನ್ ಸ್ಟೇಟ್ಮೆಂಟ್ ನೀಡಿದ್ದರು. ಅದರಂತೆ ಅವರೀಗ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ. ಇಲ್ಲೇ ಸೆಟಲ್ ಆಗೋಕೆ ಸಕಲ ಸಿದ್ದತೆಗಳನ್ನ ಮಾಡ್ತಿದ್ದಾರೆ. ಅಷ್ಟೇ ಅಲ್ಲ, ನಮ್ಮ ಕನ್ನಡ ಚಿತ್ರರಂಗಕ್ಕೂ ಅಫಿಶಿಯಲಿ ನಟನಾಗಿ ಎಂಟ್ರಿ ಕೊಟ್ಟಿದ್ದಾರೆ.
ಹೌದು.. ಸುಜಯ್ ಶಾಸ್ತ್ರಿ ನಿರ್ದೇಶನದ 8 ಅನ್ನೋ ಕನ್ನಡ ಸಿನಿಮಾದ ಮೂಲಕ ಅನುರಾಗ್ ಕಶ್ಯಪ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಅದರ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗ್ತಿದ್ದು, ಅನುರಾಗ್ ಕಶ್ಯಪ್ ಕೂಡ ಇಲ್ಲೇ ಬೀಡು ಬಿಟ್ಟಿದ್ದಾರೆ. ನಮ್ಮ ಗ್ಯಾರಂಟಿ ನ್ಯೂಸ್ ನ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ ಅನುರಾಗ್ ಕಶ್ಯಪ್, ಸಾಕಷ್ಟು ವಿಷಯಗಳನ್ನ ಮುಕ್ತವಾಗಿ ಹಂಚಿಕೊಂಡರು. ಅದರಲ್ಲೂ ಬಾಲಿವುಡ್ ಮೇಲೆ ಅವರಿಗಿರೋ ಬೇಸರ, ಅಸಮಾಧಾನ ಏಕೆ ಅನ್ನೋ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಕೂಡ ಸಿಕ್ತು.
ರಾ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಪಳಗಿರೋ ಅನುರಾಗ್ ಕಶ್ಯಪ್, ಮೂರು ದಶಕಗಳಿಂದ ಹಿಂದಿ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ. ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ನಟನಾಗಿಯೂ ಮಿಂಚು ಹರಿಸಿದ್ದಾರೆ. ಆದಾಗ್ಯೂ ಕೂಡ ನೇಮು, ಫೇಮು, ಹಣ, ಆಸ್ತಿ, ಅಂತಸ್ತು ಕೊಟ್ಟ ಬಾಲಿವುಡ್ ಮೇಲೆ ಅವರ ಬೇಸರ ಯಾಕೆ ಅನ್ನೋದಕ್ಕೆ ಕೊನೆಗೂ ಗ್ಯಾರಂಟಿ ನ್ಯೂಸ್ ಮೂಲಕ ಉತ್ತರಿಸಿದ್ದಾರೆ. ಬಾಲಿವುಡ್ ನಲ್ಲಿ ಸಿನಿಮಾ ಪ್ಯಾಶನ್ ಗೆ ವ್ಯಾಲ್ಯೂನೇ ಇಲ್ಲ. ಅಲ್ಲಿ ಬರೀ ಬಾಕ್ಸ್ ಆಫೀಸ್ ಕಲೆಕ್ಷನ್, ಬ್ಯುಸಿನೆಸ್ ಗೆ ಮಾತ್ರ ಪ್ರಾಮುಖ್ಯತೆ ಕೊಡ್ತಾರೆ. ಕಂಟೆಂಟ್ ಬೇಸ್ಡ್ ಸಿನಿಮಾಗಳ ಬಗ್ಗೆ ಒಲವು ತೋರುವುದಿಲ್ಲ. ಹಾಗಂತ ನಾನು ಬಾಲಿವುಡ್ ನ ಕಂಪ್ಲೀಟ್ ಆಗಿ ಕ್ವಿಟ್ ಮಾಡಿಲ್ಲ. ನನ್ನದೆರಡು ಹಿಂದಿ ಸಿನಿಮಾಗಳು ಕೂಡ ಎಡಿಟ್ ಹಂತದಲ್ಲಿವೆ. ಆದ್ರೆ ಮುಂಬೈ ನಲ್ಲಿ ಇರಬಾರದು ಅಂತ ನಿರ್ಧರಿಸಿದ್ದೇನೆ ಎಂದಿದ್ದಾರೆ.
ಅನುರಾಗ್ ಕಶ್ಯಪ್ ನುಡಿದಂತೆ ನಡೆಯುತ್ತಿದ್ದಾರೆ. ಸೌತ್ ಗೆ ಬಂದಾಗಿದೆ. ಬೆಂಗಳೂರಿನಲ್ಲೇ ಸೆಟಲ್ ಆಗೋಕೆ ಮನೆ ಹುಡುಕಾಟದಲ್ಲಿದ್ದಾರಂತೆ. ಬೆಂಗಳೂರು ಸೌತ್ ಸಿನಿದುನಿಯಾದ ಸೆಂಟರ್ ಪಾಯಿಂಟ್. ಹಾಗಾಗಿ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡ ಬ್ಯುಸಿ ಇರೋ ಅನುರಾಗ್ ಕಶ್ಯಪ್ ಗೆ ಸ್ಯಾಂಡಲ್ ವುಡ್ ಸೆಕೆಂಡ್ ಹೋಮ್ ಆಗ್ತಿದೆ. ತೆಲುಗಿನ ಡಕಾಯಿತ್ ಸಿನಿಮಾ ರಿಲೀಸ್ ಗೆ ಸಜ್ಜಾಗ್ತಿದ್ದು, ತಮಿಳಲ್ಲೂ ಎರಡು ಸಿನಿಮಾ ಮಾಡ್ತಿದ್ದಾರೆ. ಬಿಡುವಿನ ಸಮಯದಲ್ಲಿ ಹೆಚ್ಚಾಗಿ ಪುಸ್ತಕಗಳನ್ನ ಓದುವ ಹವ್ಯಾಸವಿರೋ ಕಶ್ಯಪ್ ಗೆ ರಾಜ್ ಬಿ ಶೆಟ್ಟಿ ಆಪ್ತಮಿತ್ರನಂತೆ.
ಸುಜಯ್ ಶಾಸ್ತ್ರಿ ನಿರ್ದೇಶನದ ಸಿನಿಮಾದ ಟೈಟಲ್ 8. ಆದ್ರೆ ಅನುರಾಗ್ ಕಶ್ಯಪ್ ಲಕ್ಕಿ ನಂಬರ್ 10 ಅಂತೆ. ಕನ್ನಡ ಚಿತ್ರರಂಗಕ್ಕೆ ಅಡ್ವೈಸ್ ಮಾಡುವಂಥದ್ದೇನಿಲ್ಲ. ನಾನು ಅಷ್ಟು ದೊಡ್ಡವನು ಕೂಡ ಅಲ್ಲ. ಆದ್ರೆ ಲೈಫ್ ನನಗೆ ಎರಡಲ್ಲ, ನಾಲ್ಕು ಬಾರಿ ಚಾನ್ಸ್ ಕೊಟ್ಟಿದೆ ಎಂದಿದ್ದಾರೆ. ಇನ್ನು ನಟ ಯಶ್ ಹಾಗೂ ಟಾಕ್ಸಿಕ್ ಚಿತ್ರದ ಬಗ್ಗೆ ಮಾತನಾಡಿದ ಅನುರಾಗ್ ಕಶ್ಯಪ್, ರಾಕಿಭಾಯ್ ಸ್ಪೀಡ್ ಹಾಗೂ ಟ್ಯಾಲೆಂಟ್ ನ ಕೊಂಡಾಡಿದ್ರು. ಅಲ್ಲದೆ, ಗೀತು ಮೋಹನ್ ದಾಸ್ ನನ್ನ ಸಹೋದರಿ. ಒಳ್ಳೆಯ ಸಿನಿಮಾ ಹೊರಬರುವ ನಿರೀಕ್ಷೆಯಿದೆ. ನಾನಂತೂ ಕಾತರದಿಂದ ಕಾಯ್ತಿದ್ದೀನಿ ಅಂತ ಟಾಕ್ಸಿಕ್ ಚಿತ್ರದ ಬಗ್ಗೆ ಕೊಂಡಾಡಿದ್ರು ಕಶ್ಯಪ್.
ಇನ್ನು ನಟ, ನಿರ್ದೇಶಕ ಉಪೇಂದ್ರ ಬಗ್ಗೆಯೂ ಮಾತನಾಡಿದ ಅನುರಾಗ್ ಕಶ್ಯಪ್, RGV ಸೂಚನೆಯಂತೆ ಉಪೇಂದ್ರ ಹಾಗೂ ಓಂ ಶೂಟಿಂಗ್ ಸೆಟ್ ಗಳಿಗೆ ವಿಸಿಟ್ ಮಾಡಿದ್ದ ಆ ದಿನಗಳನ್ನ ನೆನೆದರು. ಕನ್ನಡಕ್ಕೆ ನಂದು ಈಗಿನ ನಂಟಲ್ಲ, ರಾಮ್ ಗೋಪಾಲ್ ವರ್ಮಾ ಶಿಷ್ಯನಾಗಿದ್ದ ಕಾಲದಿಂದಲೇ ಇದೆ. ನಾ ಕನ್ನಡದಿಂದಲೇ ಸಾಕಷ್ಟು ಕಲಿತಿದ್ದೇನೆ. ನನಗೆ ಕನ್ನಡ ಚಿತ್ರರಂಗವೇ ಸ್ಫೂರ್ತಿ. ಹಾಗಾಗಿ ಕನ್ನಡ ಚಿತ್ರರಂಗಕ್ಕೂ ಏನಾದ್ರು ಕೊಡಬೇಕು ಅನ್ನೋದು ನನ್ನ ಆಶಯ ಎಂದಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್